ಸ್ವಾವಲಂಬಿ ಬದುಕಿಗೆ ಆಸರೆಯಾದ ಕೈ ಕಸೂತಿ ಕೆಲಸ: ಇತರರಿಗೂ ಕಲಿಸುವ ಮೂಲಕ ಮಾದರಿಯಾದ ಪಶ್ಚಿಮ ಬಂಗಾಳ ಮಹಿಳೆ
ಬೀದರ್ ಜಿಲ್ಲೆಯ ಬಾಲ್ಕಿ ತಾಲ್ಲೂಕಿನ ಕೋಣಮೆಳಕುಂದಾ ಗ್ರಾಮದಲ್ಲಿ ಓರ್ವ ಮಹಿಳೆ ಕೋವಿಡ್ ಲಾಕ್ಡೌನ್ ಸಮಯದಲ್ಲಿ ಕಸೂತಿ ಕಲೆಯನ್ನು ಕಲಿತು ಸ್ವಾವಲಂಬಿ ಜೀವನ ನಡೆಸುತ್ತಿದ್ದಾರೆ. ಅಷ್ಟೇ ಅಲ್ಲದೆ ಗ್ರಾಮೀಣ ಮಹಿಳೆಯರಿಗೆ ಕಲೆಯನ್ನು ಕಲಿಸುತ್ತಿದ್ದಾರೆ. ಇವರ ತಯಾರಿಸುವ ವಿವಿಧ ಅಲಂಕಾರಿಕ ವಸ್ತುಗಳಿಗೆ ಮಾರುಕಟ್ಟೆಯಲ್ಲಿ ಭಾರೀ ಬೇಡಿಕೆ ಇದೆ.

ಬೀದರ್, ಜೂನ್ 02: ಅಂದು ದೇಶದಲ್ಲಿ ಕೋವಿಡ್ ಸೋಂಕಿನಿಂದ ಮನುಕುಲವೇ ನಲುಗಿ ಹೋಗಿತ್ತು. ಅದೆಷ್ಟೋ ಜನರು ಕೆಲಸವಿಲ್ಲದೆ ಮನೆಯಲ್ಲಿ ಖಾಲಿ ಕುಳಿತು ಊಟಕ್ಕೂ ಪರದಾಟ ನಡೆಸಿದ್ದರು. ಆದರೆ ಅದೇ ಸಮಯವನ್ನು ಬಳಸಿಕೊಂಡ ಮಹಿಳೆಯೊಬ್ಬರು (woman) ಕೈ ಕಸೂತಿ (Hand Embroidery) ಕಲಿತುಕೊಂಡು ಸ್ವಾವಲಂಬಿ ಬದುಕು ಕಟ್ಟಿಕೊಂಡರು. ತಾವು ಕಲಿತು ಸುಮ್ಮನಾಗದೇ ಇಂದು ಗ್ರಾಮೀಣ ಮಹಿಳೆಯರಿಗೆ ಕಲಿಸಿಕೊಡುತ್ತಿದ್ದಾರೆ. ಆ ಮೂಲಕ ಮಾದರಿ ಮಹಿಳೆಯಾಗಿದ್ದಾರೆ.
ಕೊಲ್ಕತ್ತಾದ ಸುಕಲಿ ಎಂಬುವವರು ಹೊಟ್ಟೆ ಪಾಡಿಗಾಗಿ ಕರ್ನಾಟದ ಬೀದರ್ ಜಿಲ್ಲೆಗೆ 11 ವರ್ಷದ ಹಿಂದೆ ಆಗಮಿಸಿದ್ದು, ಭಾಲ್ಕಿ ತಾಲೂಕಿನ ಕೋಣಮೆಳಕುಂದಾ ಗ್ರಾದಮದಲ್ಲಿ ವಾಸವಾಗಿದ್ದಾರೆ. ತಮ್ಮ ಕೈ ಕಸೂತಿ ಕೆಲಸದಿಂದಲ್ಲೇ ಸದ್ಯ ಎಲ್ಲರ ಗಮನ ಸೆಳೆಯುತ್ತಿದ್ದಾರೆ. ಇವರು ತಯಾರಿಸುವ ಮನೆ ಅಲಂಕಾರಿಕಾ ವಸ್ತುಗಳಿಗಿದೆ ಮಾರುಕಟ್ಟೆಯಲ್ಲಿ ಭಾರೀ ಬೇಡಿಕೆ ಇದೆ.
ಇದನ್ನೂ ಓದಿ: ಐತಿಹಾಸಿಕ ಸದಾಶಿವಗಡ ಕೊಟೆಯ ಮೇಲೆ ಜಂಗಲ್ ಲಾಡ್ಜ್ ಕಣ್ಣು: ರೆಸಾರ್ಟ್ ನಿರ್ಮಾಣಕ್ಕೆ ಸ್ಥಳೀಯ ಸಂಘಟನೆಗಳ ವಿರೋಧ
ತಾಯಿ ಹಾಗೂ ಅಜ್ಜಿಯಿಂದ ಅಲ್ಪಸ್ವಲ್ಪ ಕಸೂತಿ ಕೆಲಸವನ್ನ ಕಲೆತಿದ್ದ ಸುಕಲಿ ಅವರು, ಕೋವಿಡ್ನಿಂದ ಲಾಕ್ಡೌನ್ ಆದ ಸಮಯದಲ್ಲಿ ಸಂಪೂರ್ಣವಾಗಿ ಕಲಿತುಕೊಳ್ಳಲು ಅವಕಾಶ ಸಿಕ್ಕಿತು. ವಿವಿಧ ಬಗೆಯ ಅಲಂಕಾರಿಕ ವಸ್ತುಗಳನ್ನ ತಯಾರಿಸಿ ಪರಿಚಯದವರಿಗೆ ಮಾರಾಟ ಮಾಡುತ್ತಿದ್ದಾರೆ.
40 ಮಹಿಳೆಯರಿಂದ ಕಸೂತಿ ಕಲೆ ಕಲಿಕೆ
ಇನ್ನೂ ಇವರು ತಯಾರಿಸುವ ವಸ್ತುಗಳ ಅಂದಚಂದಕ್ಕೆ ಮಾರುಹೋಗುತ್ತಿರುವ ಮಹಿಳೆಯರು ತಾವು ಈ ಕಲೆಯನ್ನ ಕಲಿಯಬೇಕು ಅಂತಾ ಸುಕಲಿ ಬಳಿ ಕೇಳಿದಾಗ ಅವರು ಖುಷಿಯಿಂದಲೇ ಗ್ರಾಮದ ಸುಮಾರು 40 ಮಹಿಳೆಯರಿಗೆ ಇವರು ಕಲಿತಿರುವ ಕಸೂತಿ ಕಲೆಯನ್ನ ಹೇಳಿಕೊಡುತ್ತಿದ್ದು, ಆ ಮಹಿಳೆಯರು ಕೂಡ ಮನಸ್ಸುಕೊಟ್ಟು ಕಸೂತಿ ಕಲೆಯನ್ನ ಕಲಿಯುತ್ತಿದ್ದೇವೆಂದು ಗ್ರಾಮದ ಯುವತಿಯರು ಹೇಳುತ್ತಾರೆ. ಇನ್ನೂ ಇವರ ಕಲೆಯನ್ನ ಗ್ರಾಮದ ಜನರು ಕೂಡ ಕೊಂಡಾಡಿದ್ದಾರೆ.
ಕಳೆದ 11 ವರ್ಷದಿಂದ ಕೋಣಮೇಳಕುಂದಾ ಗ್ರಾಮದಲ್ಲಿ ನೆಲೆಸಿರುವ ಸುಕಲಿ ಅವರು ತಮ್ಮಗೆ ಗೊತ್ತಿದ್ದ ಕಸೂತಿ ಕಲೆಯನ್ನ ಮರೆತೆ ಬಿಟ್ಟಿದ್ದರು. ತಾವು ಕಲಿತಿದ್ದ ಕಲೆಯನ್ನ ಯಾವಾಗ ಲಾಕ್ ಡೌನ್ ಆಯಿತೋ ಕೆಲಸವಿಲ್ಲದೆ ಮನೆಯಲ್ಲಿ ಕುಳಿತುಕೊಳ್ಳುವ ಹಾಗಾಯಿತೋ, ಅವತ್ತು ಅವರು ತಮಗೆ ಅಲ್ಪಸ್ವಲ್ಪ ಗೊತ್ತಿದ್ದ ಕಸೂತಿ ಕಲೆಯನ್ನ ಪೂರ್ಣ ಪ್ರಮಾಣದಲ್ಲಿ ಕಲಿತು ಅದಕ್ಕೆ ಬೇಕಾದ ಕಚ್ಚಾ ವಸ್ತುಗಳನ್ನ ಕೋಲ್ಕತ್ತಾದಿಂದ ಅವರ ಸಂಬಂಧಿಗಳ ಕಡೆಯಿಂದ ತರಿಸಿಕೊಂಡು ಈಗ ತಮ್ಮ ಮನೆಯಲ್ಲಿಯೇ ವಿವಿಧ ವಸ್ತುಗಳನ್ನ ತಯಾರಿಸುತ್ತಿದ್ದಾರೆ.
ಮಾರುಕಟ್ಟೆಯಲ್ಲಿ ಭಾರೀ ಬೇಡಿಕೆ
ಇನ್ನೂ ನಾವು ಬಿಸಾಕಿದ್ದ ವಸ್ತುಗಳನ್ನೇ ಬಳಿಸಿಕೊಂಡು ಗೊಂಬೆಗಳು, ದೇವಸ್ತಾನ, ಬ್ಯಾಗ್, ಗಡಿಯಾರ, ಹೀಗೆ 50 ಕ್ಕೂ ಹೆಚ್ಚು ವಸ್ತುಗಳನ್ನ ತಯಾರಿಸಿ ಮಾರಾಟ ಮಾಡುತ್ತಿದ್ದಾರೆ. ಇವರು ತಯಾರಿಸುವ ವಸ್ತುವಿಗೆ ಈಗ ಮಾರುಕಟ್ಟೆಯಲ್ಲಿ ಸಾಕಷ್ಟು ಬೇಡಿಕೆ ಶುರುವಾಗಿದ್ದು, ಆದರೆ ಇವರು ಮಾತ್ರ ತಮಗೆ ಬೇಕಾದವರಿಗೆ ಮಾತ್ರ ತಾವು ಕೇಳಿದ ಡಿಸೈನ್ನಲ್ಲಿ ಅಲಂಕಾರಿಕ ವಸ್ತುಗಳನ್ನ ತಯಾರಿಸಿ ಕೊಡುತ್ತಿದ್ದಾರೆ.
ಸ್ವಂತ ಉದ್ಯೋಗ ಮಾಡುವ ಯೋಚನೆ ಇದೆ: ಸುಕಲಿ
ಈ ಬಗ್ಗೆ ಟಿವಿ9 ಜೊತೆಗೆ ಮಾನಾಡಿರುವ ಸುಕಲಿ, ಗ್ರಾಮದ ಮಹಿಳೆಯರು ತಮ್ಮ ಇಚ್ಚೆಯಿಂದ ಕೈ ಕಸೂತಿ ಕಲೆಯನ್ನ ಕಲಿಯುತ್ತಿದ್ದಾರೆ. ಗ್ರಾಮದ ಎಲ್ಲಾ ಮಹಿಳೆಯರು, ಯುವತಿಯರು ಪೂರ್ಣ ಪ್ರಮಾಣದಲ್ಲಿ ಕಲಿತರೆ ಎಲ್ಲರೂ ಸೇರಿಕೊಂಡು ಒಂದು ಅಂಗಡಿಯನ್ನ ತೆರೆದು ಸ್ವಂತವಾಗಿ ಉದ್ಯೋಗ ಮಾಡುವ ಯೋಚನೆ ಇದೆ ಎನ್ನುತ್ತಾರೆ.
ಇದನ್ನೂ ಓದಿ: Karnataka Weather: ಕರ್ನಾಟಕದಾದ್ಯಂತ ಕೊಂಚ ಬಿಡುವು ಪಡೆದ ಮಳೆರಾಯ, ಜೂನ್ 8ರವರೆಗೂ ಸಾಧಾರಣ ಮಳೆ
ದೇಶದಲ್ಲಿ ಕೊರೊನಾ ಮಹಾಮಾರಿಯಿಂದ ಅದೇಷ್ಟೋ ಜನ ಪ್ರಾಣ ಕಳೆದುಕೊಂಡರು, ಅಷ್ಟೇ ಅಲ್ಲದೆ ಲಾಕ್ ಡೌನ್ ಹೇರಿದ್ದರಿಂದ ಅದೇಷ್ಟೊ ಯುವಕರು-ಯುವತಿಯರು ಉದ್ಯೋಗ ಕಳೆದುಕೊಂಡು ಕಂಗಾಲಾಗಿದ್ದರು. ಆದರೆ ಸುಕಲಿ ಅವರು ಲಾಕ್ ಡೌನ್ನಲ್ಲಿ ಸಮಯ ವ್ಯರ್ಥ ಮಾಡದೆ ಕಸೂತಿ ಕಲೆಯನ್ನ ಕಲಿತು ಸ್ವಾವಲಂಬಿ ಬದುಕು ಕಟ್ಟಿಕೊಂಡಿದ್ದಲ್ಲದೆ, ಇತರೆ ಯುವತಿಯರಿಗೆ ಕಲಿಸುತ್ತಿದ್ದಾರೆ. ಗ್ರಾಮಸ್ಥರು ಸುಕಲಿ ಅವರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 8:16 am, Mon, 2 June 25