ಮದ್ವೆ ಮಾಡುವ ಭರವಸೆ ನೀಡಿ ಮೋಸ: ಪ್ರೇಯಸಿಯನ್ನ ದೂರ ಮಾಡಿದ್ದಕ್ಕೆ ಪ್ರಿಯಕರ ಆತ್ಮಹತ್ಯೆಗೆ ಯತ್ನ
ಪ್ರೇಯಸಿಯನ್ನು ತನ್ನಿಂದ ದೂರ ಮಾಡಿದ್ದಕ್ಕೆ ಚಿಕ್ಕಬಳ್ಳಾಪುರ ತಾಲ್ಲೂಕಿನ ಕೌರನಹಳ್ಳಿಯ ಶೇಖರ್ ಎಂಬುವರುಮನನೊಂದು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಚಿಕ್ಕಬಳ್ಳಾಪುರ ತಾಲೂಕಿನ ಕೌರನಹಳ್ಳಿ ಗ್ರಾಮದಲ್ಲಿ ಘಟನೆ ನಡೆದಿದೆ. ಹಾಗಿದ್ದರೆ, ಪ್ರೇಮಿಗಳನ್ನು ದೂರ ಮಾಡಲು ಕಾರಣವೇನು? ಯುವತಿ ಪೋಷಕರಿಗೆ ಯುವಕನ ಮೇಲೆ ಏಕೆ ಸಿಟ್ಟು? ಇಲ್ಲಿದೆ ಕಾರಣ

ಚಿಕ್ಕಬಳ್ಳಾಪುರ, ಜುಲೈ 04: ಪ್ರಿಯತಮೆಯನ್ನು ತನ್ನಿಂದ ದೂರ ಮಾಡಿದ್ದಕ್ಕೆ ಪ್ರಿಯಕರ ಮನನೊಂದು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಚಿಕ್ಕಬಳ್ಳಾಪುರ (Chikkaballapur) ತಾಲೂಕಿನ ಕೌರನಹಳ್ಳಿ ಗ್ರಾಮದಲ್ಲಿ ನಡೆದಿದೆ. ಚಿಕ್ಕಬಳ್ಳಾಪುರ ತಾಲೂಕಿನ ಕೌರನಹಳ್ಳಿ ಗ್ರಾಮದ ನಿವಾಸಿ ಶೇಖರ್ (35 ವರ್ಷ) ವಿಷ ಸೇವಿಸಿದ ಪ್ರಿಯಕರ. ಶೇಖರ ಚಿಕ್ಕಬಳ್ಳಾಪುರ ನಗರದ ಖಾಸಗಿ ಕಾಲೇಜಿನ ಬಸ್ ಚಾಲಕರಾಗಿದ್ದಾರೆ. ಶೇಖರ ಅವರು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲ್ಲೂಕಿನ ದಂಡಿಗಾನಹಳ್ಳಿ ಗ್ರಾಮದ ಓರ್ವ ಯುವತಿಯನ್ನು ಪ್ರೀತಿಸುತ್ತಿದ್ದಾರೆ.
ಯುವತಿ ಚಿಕ್ಕಬಳ್ಳಾಪುರ ನಗರದ ಪ್ರತಿಷ್ಠಿತ ಖಾಸಗಿ ಕಾಲೇಜಿನಲ್ಲಿ ಬಿಬಿಎ ವ್ಯಾಸಾಂಗ ಮಾಡುತ್ತಿದ್ದಾರೆ. ಯುವತಿ ಪ್ರತಿದಿನ ಕಾಲೇಜು ಬಸ್ಸಿನಲ್ಲಿ ಕಾಲೇಜಿಗೆ ಹೋಗಿ ಬರುತ್ತಿದ್ದರು. ಇಬ್ಬರ ಮಧ್ಯೆ ಸ್ನೇಹ ಬಳೆದಿದೆ, ಸ್ನೇಹ ಪ್ರೇಮಕ್ಕೆ ತಿರುಗಿದೆ. ಇಬ್ಬರೂ ಪ್ರೀತಿಸಲು ಆರಂಭಿಸಿದ್ದಾರೆ.
ಕಳೆದ ಕೆಲವು ದಿನಗಳ ಹಿಂದೆ ಪ್ರೇಮಿಗಳು ಮನೆ ಬಿಟ್ಟು ಹೋಗಿ ದೇವಸ್ಥಾನವೊಂದರಲ್ಲಿ ಮದುವೆನೂ ಆಗಿದ್ದರು. ಆದರೆ, ಯುವತಿಯ ಪೊಷಕರು ತಮ್ಮ ಮಗಳು ಕಾಣೆಯಾದ ಬಗ್ಗೆ ದೂರು ನೀಡಿದ್ದರು. ಆಗ ಜೋಡಿ ಚಿಕ್ಕಬಳ್ಳಾಪುರ ಮಹಿಳಾ ಪೊಲೀಸ್ ಠಾಣೆಗೆ ಬಂದಾಗ ಆಗಬಾರದ ಘಟನೆ ಆಗಿದೆ.
ಠಾಣೆಯಲ್ಲೇ ದಂಪತಿಯನ್ನು ದೂರ ಮಾಡಲು ಯುವತಿಯ ಪೊಷಕರು ಪ್ರಯತ್ನ ಮಾಡಿದ್ದಾರೆ. ಪೊಲೀಸರ ಮೇಲೆ ರಾಜಕೀಯ ಒತ್ತಡ ಹೇರಿದ್ದಾರಂತೆ. ಆದರೂ, ಯುವತಿ ಏನೇ ಆದ್ರು ಶೇಖರ್ ಜೊತೆ ಹೋಗುವುದಾಗಿ ಪಟ್ಟು ಹಿಡಿದಿದ್ದಳಂತೆ.
ಇದನ್ನೂ ಓದಿ: ಕೆಲಸದಾಕೆ ಜತೆ ಚಕ್ಕಂದ ಆಡ್ತಾನೆಂದು ಪತಿಗೆ ಚಟ್ಟ ಕಟ್ಟಿದ ಪತ್ನಿ: ಶವಕ್ಕೆ ಸ್ನಾನ ಮಾಡಿ ಮಲಗಿಸಿ ನಾಟಕ!
ಆಗ, ಆಷಾಢ ಮಾಸ ಕಳೆದ ನಂತರ ಇಬ್ಬರಿಗೆ ಕಲ್ಯಾಣ ಮಂಟಪದಲ್ಲಿ ಮರು ಮದುವೆ ಮಾಡುವುದಾಗಿ ನಂಬಿಸಿ ಇಬ್ಬರನ್ನೂ ಯುವತಿ ಪೋಷಕರು ತಮ್ಮ ಕಾರಿನಲ್ಲಿ ಕರೆದುಕೊಂಡು ಚಿಕ್ಕಬಳ್ಳಾಪುರದಿಂದ ದೇವನಹಳ್ಳಿ ಹೊರಟಿದ್ದಾರೆ. ದಾರಿ ಮಧ್ಯೆ ಶೇಖರ್ನನ್ನು ಕಾರಿನಿಂದ ಕೆಳಗೆ ತಳ್ಳಿ, ತಮ್ಮ ಹುಡುಗಿಯನ್ನು ಕರೆದುಕೊಂಡು ಹೋಗಿದ್ದಾರಂತೆ.
ಶುಕ್ರವಾರ (ಜು.04) ಬೆಳಿಗ್ಗೆ ಶೇಖರ್ ತನ್ನ ಪ್ರಿಯತಮೆಯನ್ನು ಭೇಟಿ ಮಾಡಲು ಆಕೆಯ ಮನೆ ಬಳಿ ಹೋಗಿದ್ದಾರೆ. ಆಗ ಆಕೆಯ ಪೋಷಕರು ಬೈಯ್ದು ವಾಪಸ್ ಕಳುಹಿಸಿದ್ದಾರೆ. ಇದರಿಂದ ಮನನೊಂದ ಶೇಖರ್ ವಾಪಸ್ ತನ್ನೂರಿಗೆ ಆಗಮಿಸಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದು, ಚಿಕ್ಕಬಳ್ಳಾಪುರ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ.